ತಂಜಾವೂರು ವಾಸ್ತುಶೈಲಿಯ ಕಾರ್ಮಾರು ಶ್ರೀಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆಯಿಂದ
ಬದಿಯಡ್ಕ: ತಂಜಾವೂರು ವಾಸ್ತುಶೈಲಿಯ, ಆಳೆತ್ತರದ ಮಹಾವಿಷ್ಣು ಮೂರ್ತಿಯಿಂದ ಗಮನಾರ್ಹವಾಗಿ ಕಂಗೊಳಿಸುವ ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ 32 ವರ್ಷಗಳ ಬಳಿಕ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ ಹಾಗೂ ರಾಜಗೋಪುರಗಳೊಂದಿಗೆ ನವೀಕರಣಗೊಂಡಿದ್ದು, ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿ, ಗೌರವಾಧ್ಯಕ್ಷತೆಯಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಾಳೆಯಿಂದ 9ರ ವರೆಗೆ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಅವರು ತಿಳಿಸಿದರು.
ಕಾರ್ಯಕ್ರಮದ ವಿವರ :
ಕಾರ್ಯಕ್ರಮದ ಅಂಗವಾಗಿ ನಾಳೆ ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿರುವುದು. 9 ಗಂಟೆಗೆ ಕೆಡೆಂಜಿ ಶ್ರೀ ಮಹಾವಿಷ್ಣುಕ್ಷೇತ್ರದಿಂದ ವಿವಿಧ ಆಕರ್ಷಣೆಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬದಿಯಡ್ಕ, ನೀರ್ಚಾಲು ಪೇಟೆಯಾಗಿ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ. ಸಂಜೆ 4ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, 6.30ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ವಾಮೀಜಿಗಳ ಆಗಮನ, ಪೂರ್ಣಕುಂಭ ಸ್ವಾಗತ, 7ಕ್ಕೆ ಸಾಂಸ್ಕೃತಿಒಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವರು. ಜೊತೆಗೆ ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಪಾದಂಗಳವರು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಧಾರ್ಮಿಕ ಸಭೆಯಲ್ಲಿ ಮಧುಸೂದನ್ ಅಯರ್ ಅಧ್ಯಕ್ಷತೆ ವಹಿಸಲಿದ್ದು, ಕೆ.ಕೆ.ಶೆಟ್ಟಿ ಉದ್ಘಾಟಿಸುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು.
ವಿವಿಧ ದಿನಗಳಲ್ಲಾಗಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಕಟೀಲು, ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ, ಸಾಧ್ವಿ ಶ್ರೀಮಾತಾನಂದಮಯೀ ಒಡಿಯೂರು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳುವರು.
ಶ್ರೀ ವಿಷ್ಣುಪ್ರಭ ವೇದಿಕೆಯಲ್ಲಿ ಪ್ರತೀದಿನ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ನಾಡಿನಗಣ್ಯರು ಹಾಗೂ ಯತಿಶ್ರೇಷ್ಠರು ಪಾಲ್ಗೊಳ್ಳಲಿರುವರು. ಸಂಗೀತ, ನೃತ್ಯ, ಯಕ್ಷಗಾನ ಮೊದಲಾದ ಧಾರ್ಮಿಕ ಕಲೆಗಳು ಪ್ರದರ್ಶನಗೊಳ್ಳಿದೆ. ಶ್ರೀ ವಿಷ್ಣುಪ್ರಿಯ ಭಜನಾ ಮಂಟಪದಲ್ಲಿ ಪ್ರತೀದಿನ ಬೆಳಗ್ಗೆಯಿಂದ ರಾತ್ರಿ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆಗೇ ಪ್ರಪ್ರಥಮ ಬಾರಿಗೆ ಮೈಸೂರು ಅರಮನೆಯ ಶ್ರೀ ಯಧುವೀರಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರು ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 6ರಂದು ಬೆಳಗ್ಗೆ 108 ಕಾಯಿ ಗಣಪತಿ ಹೋಮ, 7.37ರ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣುದೇವರ ಹಾಗೂ ಪರಿವಾರದೇವತಾ ಪ್ರತಿಷ್ಠೆ, ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ.ಅಂದು ಸಂಜೆ ನಿತ್ಯನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟ ಬಂಧನ ನಡೆಯಲಿದೆ. ಮಾರ್ಚ್ 9ರಂದು ಬೆಳಗ್ಗೆ 6 ಗಂಟೆಯಿಂದ 1008 ಕಲಶಾಬಿಷೇಕ, ಬ್ರಹ್ಮಕಲಶಾಭಿಷೇಕ, ಅವಧೃತಪ್ರೋಕ್ಷಣೆ, ಮಂಗಲ ಮಂತ್ರಾಕ್ಷತೆ, ಸಂಜೆ 7 ರಿಂದಶ್ರೀ ದೇವರಉತ್ಸವ ಬಲಿ, 11.30ಕ್ಕೆ ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆಕಾರ್ಯಕ್ರಮ ಸಂಪನ್ನವಾಗಲಿದೆ.
ಮಾರ್ಚ್ 9ರಂದು ಕಾರ್ಮಾರು ಶ್ರೀ ವಿಷ್ಣುಲೀಲಾ ಮೈದಾನದಲ್ಲಿ ಪ್ರಸಿದ್ಧ ಗಾಯಕರಿಂದ ಮೆಘಾ ಗಾನಮೇಳ ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

