ಬೆಂಗಳೂರು : ಮಾತಿನ ಮಲ್ಲಿ ಎಂದೇ ಕರೆಸಿಕೊಳ್ಳುತ್ತಿದ್ದ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಆರ್ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು. ಬಳಿಕ ರೆಡಿಯೋ ಜಾಕಿ ವೃತ್ತಿಗೆ ವಿದಾಯ ಕೋರಿದ್ದ ಅವರು ಮನೆಯಲ್ಲೇ ಇದ್ದರೆನ್ನಲಾಗಿದೆ. ಆದರೆ ಫಿಟ್ ಆಂಡ್ ಫೈನ್ ಆಗಿದ್ದ ರಚನಾ ಹೃದಯಾಘಾತಕ್ಕೆ ಬಲಿಯಾಗಿರುವುದು ಎಲ್ಲರಿಗೂ ಶಾಕ್ ಕೊಟ್ಟಿದೆ.
ಜೆಪಿ ನಗರದ ಪ್ಲಾಟ್ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆನ್ನಲಾಗಿದೆ. ತಮ್ಮ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ಮುದ್ದು ಮುಖದ ರಚನಾಗೆ 39 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷಗಳಿಂದ ಅರ್ಜೆ ಕೆಲಸ ಬಿಟ್ಟಿದ್ದ ರಚನಾ ಪೋಷಕರು ಚಾಮರಾಜಪೇಟೆಯಲ್ಲಿದ್ದರು. ಇನ್ನು ರಚನಾ ಪಾರ್ಥೀವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತಿರುವುದಾಗಿ ಬಂಧುಗಳು ತಿಳಿಸಿದ್ದಾರೆ.
ಅರಳು ಹುರಿದಂತೆ ಮಾತನಾಡುತ್ತಿದ್ದ ಅವರು ಫಿಟ್ ಅಂಡ್ ಫೈನ್ ಆಗಿದ್ದರು. ರೇಡಿಯೋ ಜಾಕಿ ಕೆಲಸ ಬಿಟ್ಟ ಬಳಿಕ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು ಎನ್ನಲಾಗಿದೆ. ಕಳೆದು ಕೆಲವು ದಿನಗಳಿಂದ ಖಿನ್ನತೆಗೂ ಒಳಗಾಗಿದ್ದರೆಂಬ ಸುದ್ದಿಯೂ ಹರಿದಾಡಿದೆ.
ರಚನಾ ಧ್ವನಿ ಮತ್ತು ಮಾತಿನ ಮೋಡಿಗೆ ಒಳಗಾದವರು ಅದೆಷ್ಟೋ ಮಂದಿ. ಅದಕ್ಕಾಗಿಯೇ ರೆಡಿಯೋ ಮಿರ್ಚಿ ಕೇಳುತ್ತಿದ್ದವರು ಅನೇಕರಿದ್ದಾರೆ. ಸದಾ ನಗು ನಗುತ್ತಲೇ ಇರುತ್ತಿದ್ದ ರಚನಾಗೆ ಸಾಕಷ್ಟು ಸ್ನೇಹಿತರೂ ಇದ್ದರು. ಇನ್ನು ಸ್ಯಾಂಡಲ್ವುಡ್ನ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಸಿನಿಮಾದಲ್ಲೂ ಅವರು ಆರ್ಜೆಯಾಗಿ ಕಾಣಿಸಿಕೊಂಡಿದ್ದರು ಎಂಬುವುದು ಉಲ್ಲೇಖನೀಯ.
ಚಿನಕುರುಳಿಯಂತಿದ್ದ ರಚನಾ ಸಾವು ರೇಡಿಯೋ ಸ್ನೇಹಿತರಿಗೆ ಶಾಕ್ ತಂದಿದೆ. ದೇಹವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದ ರಚನಾ ಸದಾ ಫಿಟ್ ನೆಸ್ ಬಗ್ಗೆ ಗಮನ ಹರಿಸುತ್ತಿದ್ದು, ಹೃದಯಾಘಾತಕ್ಕೆ ಬಲಿಯಾಗಿರುವುದು ಆಘಾತ ಕೊಟ್ಟಿದೆ.
