ಪುತ್ತಿಗೆ : ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ಧನುಮಾಸದ ಪರ್ಯಂತ ಜರಗುವ ಧನುಪೂಜಾ ಮಹೋತ್ಸವ ರವಿವಾರದಂದು ಸಂಭ್ರಮದಿಂದ ಸಮಾಪ್ತಿಗೊಂಡಿತು.
ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಒಂದು ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದ ಧನುಪೂಜಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತಜನ ಪಾಲ್ಗೊಂಡು ಕೃತಾರ್ಥರಾದರು.ಇದರ ಅಂಗವಾಗಿ ತುಳುನಾಡ ತುಡರ್ ಕ್ರಿಯೇಶನ್ ನೇತೃತ್ವದಲ್ಲಿ ಗಡಿನಾಡ ಕೋಗಿಲೆ ತಂಡದವರಿಂದ ಭಕ್ತಿರಸಮಂಜರಿ ಜರಗಿತು.ಬಳಿಕ ಜರಗಿದ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ ಮಂಗಳೂರು ಸಭೆಯ ಅಧ್ಯಕ್ಷತೆವಹಿಸಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೋಫೆಸರ್ ಶ್ರೀನಾಥ್ ಸಮಾರೋಪ ಭಾಷಣಗೈದರು. ಕಣಿಪುರ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಕ್ರಂ ಪೈ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎಂ.ಶಂಕರ ರೈ ಮಾಸ್ತರ್, ಎಂ.ಚಿದಾನಂದ ಆಳ್ವ, ಡಾ.ವಿಷ್ಣು ಪ್ರಸಾದ್, ಬಾಲ ಮಧುರಕಾನನ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಧನುಪೂಜೆಗೆ ಸಹಕಾರ ನೀಡಿದ ಕ್ಷೇತ್ರ ಅರ್ಚಕರನ್ನು ಸಹಾಯಕರನ್ನು ಗೌರವಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರ ಸ್ವಾಗತಿಸಿ ಕಾರ್ಯದರ್ಶಿ ಕೇಶವ ಮಾಸ್ತರ್ ವಂದಿಸಿದರು. ಡಿ.ರಾಜೇಂದ್ರ ರೈ ನಿರೂಪಿಸಿದರು.


