ಬೆಂಗಳೂರು / ಕಾಸರಗೋಡು : ಕರ್ನಾಟಕ ನಾಟಕ ಅಕಾಡೆಮಿಯ ಮಾನ್ಯತೆ ಪಡೆದ ವಿಕೆಎಂ ಕಲಾವಿದರ ವತಿಯಿಂದ ವರ್ಷಂಪ್ರತಿ ನೀಡಲ್ಪಡುವ ಪ್ರತಿಷ್ಠಿತ "ಸಿದ್ದಾರ್ಥ ಪ್ರಶಸ್ತಿ"ಯನ್ನು ಕಾಸರಗೋಡಿನ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಶುಕ್ರವಾರ ಪ್ರಧಾನಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರಗಿದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಅವರ ಸ್ಮಾರಕ ನಾಟಕೋತ್ಸವ ಮತ್ತು ಸಾಂಸ್ಕೃತಿಕ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು. ಚಿತ್ರ ನಿರ್ಮಾಪಕ ಡಾ.ಎ.ರಾಧಕೃಷ್ಣ ರಾಜು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ವಿಠಲ್ ಕೊಪ್ಪದ್, ಹಿರಿಯ ರಂಗಭೂಮಿ ಕಲಾವಿದೆ ಕಮನೀಧರನ್, ಹಿರಿಯ ರಂಗತಜ್ಞ ಕಪ್ಪಣ್ಣ ಜಿ.ಶ್ರೀನಿವಾಸ, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಆರ್ ಲಕ್ಷಿದೇವಿ, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರವನ್ನು ಕಟ್ಟಿ ಬೆಳೆಸುವಲ್ಲಿ ಸಕ್ರಿಯರಾಗಿರುವ ಇವರು ಶ್ರೀವೆಂಕಟ್ರಮಣ ಸ್ವಾಮಿ ಕೃಪಾಪೋಷಿತ ಯಕ್ಷ ಕಲಾ ಸಂಘವನ್ನು ತನ್ನ ಸಹೋದರರ ಜತೆಗೂಡಿ ಮುನ್ನಡೆಸುತ್ತಿದ್ದು, ಗಡಿನಾಡಿನ ಕನ್ನಡ ಮಕ್ಕಳಿಗೆ ಯಕ್ಷಗಾನ ತರಬೇತಿಯ ಜತೆಗೆ ವೇಷಭೂಷಣಗಳನ್ನು ಒದಗಿಸುವ ಸಾಂಸ್ಕೃತಿಕ ಸಂಸ್ಥೆಯ ಮೂಲಕ ಹೊಳ್ಳರು ಹಲವಾರು ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಪ್ರೋತ್ಸಾಹದಾಯಕರಾಗಿದ್ದಾರೆ.

