ಬದುಕಿನ ಸಾರ್ಥಕತೆಗೆ ಸಮಾಜ ಸೇವೆಯೂ ಒಂದು ಪವಿತ್ರ ಕಾರ್ಯ ; ಸಾಮಾಜಿಕ ಕಾರ್ಯದಲ್ಲಿಯೂ, ನಾಡಿನ ಜನತೆಯ ಮನದಲ್ಲಿಯೂ ಶಾಶ್ವತ ಚಿರಂಜೀವಿಯಾಗಿ ಮುನ್ನುಡಿ ಬರೆಯಲಿದೆ - ಮಾಣಿಲ ಶ್ರೀ
January 18, 2025
0
ಕುಂಬಳೆ: ಬದುಕಿನ ಸಾರ್ಥಕತೆಗೆ ಸಮಾಜ ಸೇವೆಯೂ ಒಂದು ಪವಿತ್ರ ಕಾರ್ಯ. ಇಂತಹ ಕಾರ್ಯವನ್ನು ಕಳೆದ 39 ವರ್ಷಗಳಿಂದ ಜಾತಿ,ಮತ, ಭೇದವಿಲ್ಲದೆ ನಾಡಿನ ಜನತೆಗೆ ನೀಡಿದ ಚಿರಂಜೀವಿ ಕುಂಬಳೆ ಸಂಸ್ಥೆಯು ಇನ್ನು ಸಾಮಾಜಿಕ ಕಾರ್ಯದಲ್ಲಿಯೂ, ನಾಡಿನ ಜನತೆಯ ಮನದಲ್ಲಿಯೂ ಶಾಶ್ವತ ಚಿರಂಜೀವಿಯಾಗಿ ಮುನ್ನುಡಿ ಬರೆಯಲಿದೆ ಎಂದು ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಶ್ರೀ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿಯವರು ನುಡಿದರು.ಅವರು ನಿನ್ನೆ ರಾತ್ರಿ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಬೆಡಿ ಮಹೋತ್ಸವದಂಗವಾಗಿ ಕುಂಬಳೆಯ ಸಾಮಾಜಿಕ ಸಂಸ್ಥೆ ಚಿರಂಜೀವಿ (ರಿ.) ಕುಂಬಳೆ ಸಂಸ್ಥೆಯ 39 ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಕೇವಲ ಸಂಗೀತ ರಸಮಂಜರಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಲ್ಲದೇ ಸಾಮಾಜಿಕ ಹಿತ ಚಿತಂನೆಯಿಂದ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ನೀಡುತ್ತಿರುವ ಕೊಡುಗೆಗಳು ಅನನ್ಯವಾಗಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಹಾಗೂ ನಾಡಿನ ಅನೇಕ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಚಿರಂಜೀವಿ ಸಂಘಟನೆಯಿಂದ ಕುಂಬಳೆಯ ಜನತೆಯ ಪರಸ್ಪರ ಸಂಬಂಧ ಗಟ್ಟಿಗೊಂಡು, ಸರ್ವರೂ ಏಕತೆಯಿಂದ ಬದುಕಲು ಸಾಧ್ಯವಾಗುತ್ತಿದೆ ಎಂದವರು ತಮ್ಮ ಶುಭ ಸಂದೇಶದಲ್ಲಿ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಗಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಡಾ. ಹರಿಕಿರಣ್ , ಡಾ. ಮೊಹಮ್ಮದ್ ಶರೀಫ್ ಹೊಸಂಗಡಿ, ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸೀರ್ ಮೊಗ್ರಾಲ್, ಕುಂಬಳೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ವೇಳೆ ಡಾ. ಶಾಂಭವಿ, ಯಕ್ಷಗಾನ ಕಲಾವಿದ ತಿಮಣ್ಣ ರೈ ಮದಂಡೂರು, ಡ್ರಮ್ಸ್ ನಲ್ಲಿ ಸಾಧನೆ ಮೆರೆದ ರಿಯೋನ ಡಿನಾ ಡಿ. ಸೋಜ, ಬಾಲ ಪ್ರತಿಭೆ ಕುಮಾರಿ ಗೆಹನ ಮತ್ತು ಕೊಡುಗೈ ದಾನಿ ಕೆ.ಕೆ ಶೆಟ್ಟಿ ಯವರಿಗೆ ನೀಡುವ ಸನ್ಮಾನವನ್ನು ಇವರ ಪರವಾಗಿ ಸಹೋದರ ಮಂಜುನಾಥ ಆಳ್ವ ಸ್ವೀಕರಿಸಿದರು.
Tags







