ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ: ಅಧ್ಯಕ್ಷರಾಗಿ ಪುಷ್ಪರಾಜ್, ರಾಜ್ಯ ಸಮಿತಿಗೆ ಶ್ರೀನಿವಾಸ್, ಜಿಲ್ಲಾ ಕಾರ್ಯಕಾರಿ ಸಮಿತಿಗೆ ಹರೀಶ್ ಆದೂರು ಆಯ್ಕೆ
ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ತಾಭಾರತಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್, ಪುಷ್ಪರಾಜ್ ಬಿ.ಎನ್. ಆಯ್ಕೆಯಾಗಿದ್ದಾರೆ.
ದ.ಕ.ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಆದಿತ್ಯವಾರ ನಡೆದ ಚುನಾವಣೆಯಲ್ಲಿ 2025-28ನೆ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ವಿಜಯವಾಣಿ ಪತ್ರಿಕೆಯ ವರದಿಗಾರ ಶ್ರವಣ್ ಕುಮಾರ್ ನಾಳ ತೀವ್ರ ಸ್ಪರ್ಧೆ ನೀಡಿ 144 ಮತಗಳನ್ನು ಪಡೆದರು.
ಉಪಾಧ್ಯಕ್ಷರಾಗಿ ಅತ್ಯಧಿಕ ಮತಗಳನ್ನು ಪಡೆದ ವಿಜಯ ಕರ್ನಾಟಕದ ಮುಹಮ್ಮದ್ ಆರೀಫ್, ವಿಲೈಡ್ ಡಿ ಸೋಜ ಮತ್ತು ರಾಜೇಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಅತಿ ಹೆಚ್ಚಿನ ಮತಗಳನ್ನು ಪಡೆದ ಉದಯವಾಣಿಯ ಸತೀಶ್ ಇರಾ, ಹೊಸ ದಿಗಂತದ ಸುರೇಶ್ ಪಳ್ಳಿ, ಪುತ್ತೂರಿನ ಸಿದ್ದೀಕ್ ನೀರಾಜೆ, ಗೆಲುವು ಸಾಧಿಸಿದ್ದಾರೆ.
ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿಯ ಒಂದು ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ರೀನಿವಾಸ ನಾಯಕ್ ಇಂದಾಜೆ 204 ಮತಗಳನ್ನು ಪಡೆದು 80 ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅತಿ ಹೆಚ್ಚಿನ ಮತಗಳನ್ನು ಪಡೆದ ಸಂದೀಪ ವಾಗ್ಲೇ, ದಿವಾಕರ ಪದ್ಮುಂಜ,
ಸಂದೇಶ್ ಜಾರ, ಸಂದೀಪ್ ಕುಮಾರ್ ಎಂ, ಲಕ್ಷ್ಮೀನಾರಾಯಣ ರಾವ್, ಹರೀಶ್ ಮೋಟುಕಾನ, ಅಭಿಷೇಕ್ ಎಚ್.ಎಸ್., ಜಯಶ್ರೀ, ಭುವನೇಶ್ವರ ಜಿ, ಅಶೋಕ್ ಶೆಟ್ಟಿ ಬಿ.ಎನ್, ಹರೀಶ್ ಕೆ.ಆದೂರ್, ಗಿರೀಶ್ ಅಡ್ಡಂಗಾಯ, ಸಂದೀಪ್ ಸಾಲ್ಯಾನ್, ಆರಿಫ್ ಕಲ್ಕಟ್ಟ, ಕಿರಣ್ ಯು. ಸಿರ್ಸಿಕರ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಒಟ್ಟು 21 ಮಂದಿ ಸ್ಪರ್ಧಿಸಿದ್ದರು.
ಅಧ್ಯಕ್ಷರಾಗಿ ಸೇರಿದಂತೆ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿದ್ದ ಖಾದರ್ ಷಾ ಪ್ರಮಾಣ ಪತ್ರವನ್ನು ವಿತರಿಸಿ, ಅಭಿನಂದನೆ ಸಲ್ಲಿಸಿದರು.
ಅವಿರೋಧ ಆಯ್ಕೆ:
ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಪೂಜಾರಿ ಮತ್ತು ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

