ಚಿಪ್ಪಾರು : ಬಾಯಾರು ಗ್ರಾಮದ ಕಣಿಹಿತ್ತಿಲಿನಲ್ಲಿರುವ ಶ್ರೀಮಲರಾಯಿ ಧೂಮಾವತೀ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ನೂತನ ತರವಾಡು ಮನೆಯ ಗೃಹ ಪ್ರವೇಶೋತ್ಸವ ಹಾಗೂ ಸತ್ಯ ಚಾವಡಿಯ ಸಮರ್ಪಣೆ ಪುನರ್ ಪ್ರತಿಷ್ಠೆ ಹಾಗೂ ದೈವಗಳ ವಾರ್ಷಿಕ ನೇಮೋತ್ಸವ ನಾಳೆಯಿಂದ ಏ.24 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬಿಲ್ಲವ ಜಾತಿಯ ಬಂಗೇರ ಬಳಿಗೆ ಒಳಪಟ್ಟ ಈ ತರವಾಡು ಹಾಗೂ ದೈವಸ್ಥಾನ ಅನಾದಿ ಕಾಲದಿಂದ ಹಿಂದಿನ ವಿಟ್ಲ ಸೀಮೆಗೊಳಪಟ್ಟಿದ್ದು ಅಂದು ರಾಜರ ಅಳ್ವಿಕೆಯ ಕಾಲದಲ್ಲಿ ಈ ಸತ್ಯ ಚಾವಡಿಯಲಿ ನ್ಯಾಯ ತೀರ್ಮಾನಗಳು ನಡೆದುಕೊಂಡು ಬರುತ್ತಿದ್ದವು ಎಂಬ ಇತಿಹಾಸ ಇದೆ.ಕಾಲಾಂತರದಲಿ ನಾಶಗೊಂಡಿದ್ದು ಇದನ್ನು ಪುನರ್ ನಿರ್ಮಿಸಿ ಕುಟುಂಬದ ಆರಾಧನ ಪರ್ವಗಳನ್ನು ನಡೆಸುವ ಉದ್ದೇಶದಿಂದ ಇದೀಗ ಕುಟುಂಬಿಕರು ಸಹಸ್ರಾರು ರೂ ವೆಚ್ಚದಲ್ಲಿ ಪ್ರಾಚೀನ ಸಂಪ್ರದಾಯಿಕ ರೀತಿಯಲ್ಲಿ ಸತ್ಯ ಚಾವಡಿ ಹಾಗೂ ತರವಾಡು ಮನೆ ಅತ್ಯಾಕರ್ಷಕವಾಗಿ ನಿರ್ಮಿಸಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ ನಡೆಸಲು ನಿರ್ಧರಿಸಿದ್ದಾರೆ. ಇದರಂತೆ ಏ.21ಕ್ಕೆ ಸಂಜೆ 4 ಗಂಟೆಗೆ ಜೇಷ್ಠರಾಜ ಗಣಪತಿ ಭಜನಾ ಮಂದಿರದ ಪರಿಸರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, 5 ಗಂಟೆಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೆ ಪೂರ್ಣ ಕುಂಭ ಸ್ವಾಗತ, 5.30 ಗಂಟೆಗೆ ಬಂಬ್ರಾಣ ಧೂಮಾವತೀ ದೈವಸ್ಥಾನದ ನಾರಾಯಣ ಪೂಜಾರಿ ಅವರಿಂದ ಉಗ್ರಾಣ ಮುಹೂರ್ತ, 6 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿವಿಧ ತಾಂತ್ರಿಕ ವೈದಿಕ ವಿದಿ ವಿಧಾನಗಳು ನಡೆಯಲಿದೆ. ರಾತ್ರಿ 7 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸುವರು. ಕುಕ್ಕಾಜೆ ಶ್ರೀ ಕಾಳಿಕಾಂಬ ಅಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡುವರು. ಸೇವಾ ಸಮಿತಿ ಅಧ್ಯಕ್ಷ ಬಂಟಪ್ಪ ಪೂಜಾರಿ ನೇರೋಳ್ತಡಿ ಸಭೆಯ ಅಧ್ಯಕ್ಷತೆವಹಿಸುವರು. ವಿವಿಧ ಗಣ್ಯರು ಭಾಗವಹಿಸುವರು.
ಏ.22ಕ್ಕೆ ಬೆಳಗ್ಗೆ 8.32 ಗಂಟೆಯಿಂದ 9.40ರ ಶುಭ ಮುಹೂರ್ತದಲಿ ತರವಾಡಿನ ಗೃಹ ಪ್ರವೇಶ, ಸತ್ಯ ಚಾವಡಿ ಸಮರ್ಪಣೆ, ದೈವಗಳ ಪ್ರತಿಷ್ಠೆ ನಡೆಯಲಿದೆ. ಬಳಿಕ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ 5 ಗಂಟೆಗೆ ರಾಹು ಗುಳಿಗ ತಂಬಿಲ, ರಾತ್ರಿ 8 ಗಂಟೆಗೆ ಕಲ್ಲಾಲ್ದ ಗುಳಿಗ ನೇಮೋತ್ಸವ, ಏ.23ಕ್ಕೆ ಬೆಳಗ್ಗೆ 10 ಗಂಟೆಗೆ ಧೂಮಾವತೀ ದೈವ ನೇಮ,ಸಂಜೆ 4 ಗಂಟೆಗೆ ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ ದೈವ ನೇಮೋತ್ಸವ, ಏ.24ಕ್ಕೆ ಬೆಳಗ್ಗೆ 10 ಗಂಟೆಗೆ ಶ್ರೀಮಲರಾಯ ದೈವದ ನೇಮೋತ್ಸವ ಮಧ್ಯಾಹ್ನ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



