ಕಿನ್ನಿಗೋಳಿ : ಕಟೀಲು ಯಕ್ಷಗಾನ ಮೇಳದ ಕಲಾವಿದ ಕೊಡೆತ್ತೂರು ಶಂಭು ಕುಮಾರ್(46ವರ್ಷ) ಉಲ್ಲಂಜೆಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಹದಿನಾರನೆಯ ವಯಸ್ಸಿನಿಂದಲೇ ಮುಂಡ್ಕೂರು, ತಲಕಳ, ಮಂಗಳಾದೇವಿ, ಎಡನೀರು, ಪುತ್ತೂರು, ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಳೆದ ಏಳು ವರುಷಗಳಿಂದ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಮಧುಕೈಟಭ, ರಕ್ತಬೀಜ, ಅರುಣಾಸುರ, ದೇವೇಂದ್ರ, ಅರ್ಜುನ, ಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ಕಿನ್ನಿಗೋಳಿಯ ಯಕ್ಷಕೌಸ್ತುಭ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ಕಲಿಸುತ್ತಿದ್ದರು.
ಹೊಯಿಗೆಗುಡ್ಡೆ ದೇವಸ್ಥಾನದ ಹೆಸರಿನಲ್ಲಿ ಮೂರು ಚಿಕ್ಕಮೇಳಗಳನ್ನೂ ನಡೆಸುತ್ತಿದ್ದ ಅವರು ಯಕ್ಷಗಾನ ಧ್ವನಿಸುರುಳಿಗಳನ್ನೂ ಮಾಡಿದ್ದರು. ಅವರು ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. ಇವರ ಸಹೋದರ ಗಣೇಶ ಚಂದ್ರಮಂಡಲ ಕೂಡ ಯಕ್ಷಗಾನ ಕಲಾವಿದರಾಗಿದ್ದಾರೆ.

