ವರ್ಕಾಡಿ:- ದಿವಂಗತ ಶ್ರೀಮತಿ ಕಮಲ ಹಾಗೂ ಶ್ರೀ ತುಕ್ರ ನಾಯ್ಕ್ ರವರ ಸ್ಮರಣಾರ್ಥವಾಗಿ ವರ್ಕಾಡಿ ಗ್ರಾಮ ಪಂಚಾಯತ್ ಗೊಳಪಟ್ಟ, ಗುವೇದಪಡ್ಪು ಬಳಿಯ ಗುರುಕುಮೇರು ಮುಗುಳಿ ಎಂಬಲ್ಲಿ ಅವರ ಮನೆಯವರು ಊರಿನವರ ಸಹಕಾರದೊಂದಿಗೆ ನಿರ್ಮಿಸಲ್ಪಟ್ಟ ಬಸ್ ತಂಗುದಾಣವನ್ನು ಸಾರ್ವಜನಿಕರಿಗೆ ಸಮರ್ಪಿಸಲಾಯಿತು. ನೂತನವಾಗಿ ನಿರ್ಮಿಸಲ್ಪಟ್ಟ ಬಸ್ ತಂಗುದಾಣದ ಉದ್ಘಾಟನೆಯನ್ನು ನೆರವೇರಿಸಿದ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಭಾರತಿ ಎಸ್ ರವರು ಮಾತನಾಡುತ್ತಾ, ಸಮಾಜದ ಉನ್ನತಿಗಾಗಿ ಸದಾ ಹಾತೊರೆಯುತ್ತಿದ್ದ ತುಕ್ರ ನಾಯ್ಕ್ ರವರು ಜನಪರ ಕಾಳಜಿಯುಳ್ಳವರಾಗಿದ್ದು, ಊರಿನ ಗ್ರಾಮಸ್ಥರ ಪ್ರೀತಿ ವಿಶ್ವಾಸವನ್ನು ಗಳಿಸಿ ಜನಾನುರಾಗಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಹೆಸರು ಸದಾ ಜನಮಾನಸದಲ್ಲಿರುವಂತಾಗಲು ಮನೆಯವರು ಸೇರಿ ಊರಿನವರ ಸಹಕಾರದೊಂದಿಗೆ ಅವರ ಹೆಸರಿನಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿ ಜನತೆಗೆ ಅರ್ಪಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ
ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞ ತಲಕ್ಕಿ, ಸ್ಥಳೀಯ ಹಿರಿಯರಾದ ಸುಬ್ರಹ್ಮಣ್ಯ ಭಟ್ ಹಾಗೂ ಸುಬೇರ್ ಮಾಸ್ಟರ್ ರವರು ಶುಭ ಹಾರೈಸಿದರು. ಸಮಾರಂಭದಲ್ಲಿ ಮನೆಯವರಾದ ಗುರುವಪ್ಪ ನಾಯ್ಕ್, ಸತೀಶ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಹಮ್ಮದ್ ಕುಂಞರವರು ಸ್ವಾಗತಿಸಿ, ಐತಪ್ಪ ನಾಯ್ಕ್ ರವರು ವಂದಿಸಿದರು.
ವರದಿ : ರತನ್ ಕುಮಾರ್ ಹೊಸಂಗಡಿ
