ಕಿಳಿಂಗಾರು : ಸಮಾಜಸೇವಕರು, ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ (85) ಅವರು ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ವಿಧಿವಶರಾದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265ರಷ್ಟು ಮನೆಗಳನ್ನು ನಿರ್ಮಿಸಿ ನೀಡಿದ ಅವರು, ನೂರಾರು ಕುಟುಂಬಗಳಿಗೆ ಸೂರು ಒದಗಿಸಿಕೊಟ್ಟ ಮಹಾಪುರುಷರಾಗಿದ್ದರು. ಅಲ್ಲದೆ ಅದೆಷ್ಟೋ ಕುಟುಂಬಗಳಿಗೆ ಆರ್ಥಿವಾಗಿಯೂ ಸಹಕಾರ ನೀಡಿದ್ದ ಮಹಾನ್ ಶಕ್ತಿಯಾಗಿದ್ದರು. ಶ್ರೀ ಸತ್ಯ ಸಾಯಿಬಾಬಾ ಅವರ ಅಪ್ರತಿಮ ಭಕ್ತರಾಗಿ ಸಾಯಿರಾಂ ಭಟ್ ಎಂದೇ ಖ್ಯಾತರಾಗಿದ್ದರು. ಅಲ್ಲದೆ ಕಿಳಿಂಗಾರಿನಲ್ಲಿ ಶ್ರೀ ಸಾಯಿ ಮಂದಿರವನ್ನು ಸ್ಥಾಪಿಸಿದ್ದರು. ಉಚಿತ ಆರೋಗ್ಯ ಶಿಬಿರಗಳನ್ನೂ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಶಾರದಾ ಭಟ್, ಪುತ್ರ, ಬಿಜೆಪಿ ರಾಜ್ಯ ಸಮಿತಿ ಸದಸ್ಯರು, ಬದಿಯಡ್ಕ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎನ್.ಕೃಷ್ಣ ಭಟ್, ಪುತ್ರಿಯರಾದ ಶ್ಯಾಮಲಾ, ವಸಂತಿ ಅವರನ್ನು ಅಗಲಿದ್ದಾರೆ.
ಮಾಹಿತಿ : ಮಂಜುನಾಥ ಡಿ ಮಾನ್ಯ
